Submission 1788

ಪುಸ್ತಕದ ಶೀರ್ಷಿಕೆ: ಕೋಲುದಾರಿ

ಪುಸ್ತಕದ ಲೇಖಕರು: ಸಿದ್ದೇಶ್ ಕೆ

-------------

ಪುಸ್ತಕ ವಿಮರ್ಶೆ ಸಲ್ಲಿಸಿದವರು: ಅಚಲ ಬಿ ಹೆನ್ಲಿ

-------------

ವಿಮರ್ಶಕರ ಮೌಲ್ಯನಿರ್ಣಯ (Reader’s Rating): 5/5

ಈ ಅಂಕಗಳು ಪುಸ್ತಕ ವಿಮರ್ಶೆ ಸಲ್ಲಿಸಿದವರ ಅಭಿಪ್ರಾಯದ ಆಧಾರದಲ್ಲಿವೆ; ಇದು ಕನ್ನಡ ಪುಸ್ತಕ ಲೋಕದ ಮೌಲ್ಯನಿರ್ಣಯವಲ್ಲ.

-------------

ಪುಸ್ತಕದ ಸಾರಾಂಶ:

ಛಂದ ಪ್ರಕಾಶನದಿಂದ ಪ್ರಕಟವಾಗಿರುವ ಹೊಸ ಪುಸ್ತಕ ಸಿದ್ದೇಶ್ ಕೆ ಅವರ ಆತ್ಮಕಥೆಯಾದ "ಕೋಲುದಾರಿ". ಹುಟ್ಟುವಾಗಲೇ ಅಂಧರಾಗಿ ಹುಟ್ಟುವುದು ಒಂದು ತೆರೆನಾದ ಕಷ್ಟವಾದರೆ, ಹದಿನೆಂಟು ವರ್ಷಗಳ ಕಾಲ ಕಣ್ಣಿದ್ದು, ನಂತರ ಅಂಧರಾಗುವುದು ವಿವರಿಸಲಾಗದ ಮತ್ತೊಂದು ಬಗೆಯ ಕಷ್ಟ. ಹೇಳಬೇಕೆಂದರೆ ಮಾನವನ ಐದು ಇಂದ್ರಿಯಗಳಲ್ಲಿ ಕಣ್ಣು ಬಹಳ ಮುಖ್ಯ. ಆದರೆ ಒಂದಷ್ಟು ವರ್ಷಗಳು ಕಣ್ಣಿದ್ದು, ನಂತರ ಅಂಧರಾಗಿ, ತದ ನಂತರ ಬದುಕಲ್ಲಿ ಗೆದ್ದವರೊಬ್ಬರ ಧನಾತ್ಮಕ ಕಥೆಯಿದು. ಅಂಧತ್ವವನ್ನು ಬದುಕಿನ ಹೋರಾಟದ ಮೆಟ್ಟಿಲಾಗಿ ಪರಿವರ್ತಿಸಿಕೊಂಡು ಯಶ ಕಂಡಿರುವ ಸಿದ್ದೇಶ್ ಕೆ ಅವರಿಗೆ ಗೌರವಪೂರ್ವಕ ನಮನಗಳು. ಕಣ್ಣಿದ್ದು ಕುರುಡಾಗಿರುವ, ಕಣ್ಣಿದ್ದು ಅಸಮರ್ಥ ಭಾವದಿಂದ ದಿನದೂಡುವ ಅನೇಕ ಜನರಿಗೆ "ಕೋಲುದಾರಿ" ಪ್ರೇರಣೆ ನೀಡುವ ಪುಸ್ತಕಗಳ ಪಟ್ಟಿಯ ಸಾಲಿನಲ್ಲಿ ಜಾಗ ಪಡೆಯುತ್ತದೆ. ಈ ಪುಸ್ತಕ ಓದಲು ಪ್ರಾರಂಭಿಸಿದಾಗ ನಾನೂ ಕೆಲವು ಸಲ ಕಣ್ಣು ಮುಚ್ಚಿ ಕತ್ತಲ ಪ್ರಪಂಚ ಹೇಗಿರಬಹುದು ಎಂಬ ವಿಫಲ ಪ್ರಯತ್ನ ನಡೆಸಿದೆ. ಸಿದ್ದೇಶ್ ರವರು ನೋಡುವ ಪ್ರಪಂಚದಿಂದ ನೋಡದೇ ಇರುವ ಪ್ರಪಂಚಕ್ಕೆ ಕಾಲಿಟ್ಟು, ನಂತರ ತಮ್ಮ ಆತ್ಮಸ್ಥೈರ್ಯ, ಸತತ ಪ್ರಯತ್ನ, ಕುಟುಂಬ- ಸ್ನೇಹಿತರ ಬೆಂಬಲ, ಎಲ್ಲಕ್ಕೂ ಮಿಗಿಲಾಗಿ ಅವರ ತಂದೆಗೆ ಹೇಳಿದ "ತಾನು ಜೀವನದಲ್ಲಿ ಎಂದಿಗೂ ಹೊರೆಯಾಗುವುದಿಲ್ಲವೆಂಬ" ಅಚಲವಾದ ಮಾತು ಅವರನ್ನು ಎಲ್ಲ ಕಷ್ಟಗಳನ್ನು ಎದುರಿಸಲು ಧೈರ್ಯ ತಂದುಕೊಟ್ಟಿದೆ. "ಕೋಲುದಾರಿ" ಪುಸ್ತಕದಲ್ಲಿ ಜಗತ್ತು ಅದೆಷ್ಟು ವರ್ಣರಂಜಿತವಾಗಿದೆ ಎನಿಸುವ ಪ್ರಾಯವಾದ ಹದಿನೆಂಟರಲ್ಲಿ ಅನಾರೋಗ್ಯದ ಕಾರಣ ಕಣ್ಣು ಕಳೆದುಕೊಳ್ಳುವ ಯುವಕನಿಂದ ಪ್ರಾರಂಭಗೊಂಡು, ನಂತರ ಓದು-ಪದವಿ-ಕೆಲಸ, ಮಾತ್ರವಲ್ಲದೇ ಅಂಧರು ಕಣ್ಣಿಲ್ಲದೆಯೂ ಹೇಗೆ ಎಲ್ಲ ಜನರಂತೆ ತಮ್ಮ ಬಿಳಿ ಕೋಲಿನ ಸಹಾಯದಿಂದ ಓಡಾಡಬೇಕು, ಅಂಧರು ಹೇಗೆ ಸ್ವಾವಲಂಬಿಯಾಗಿ ಎಲ್ಲ ಕೆಲಸಗಳನ್ನು ಮಾಡಲು ಕಲಿಯುತ್ತಾರೆ, ಪ್ರತಿ ಹೆಜ್ಜೆಯಲ್ಲೂ ಅವರಿಗೆ ಎದುರಾಗುವ ಸವಾಲುಗಳೇನು ಎಂಬ ಎಲ್ಲ ರೀತಿಯ ಮಾಹಿತಿಗಳನ್ನು ಕಲೆ ಹಾಕುತ್ತಾ ಹೋಗುತ್ತದೆ. ಮಧ್ಯದಲ್ಲಿ ಶ್ರೀದೇವಿಯವರೊಂದಿಗೆ ಅರಳುವ ಪ್ರೀತಿ, ಸರಕಾರಿ ಕೆಲಸಕ್ಕೆ ಸಿದ್ದೇಶ್ ರವರು ನಡೆಸುವ ಕಠಿಣ ತರಬೇತಿ, ಇವೆಲ್ಲ ಓದುಗನಿಗೆ ಚಿತ್ರ ನೋಡಿದಂತೆ ಭಾಸವಾಗುತ್ತದೆ. ಅನೇಕ ಸಲ ಕಣ್ಣು ಮಂಜಾದರೆ, ಹಲವು ಸಲ ಎಲ್ಲ ಸರಿಯಿದ್ದು ನಾವು ಮಾಡಿದ ಸಾಧನೆಯಾದರೂ ಏನು ಎಂಬ ಪ್ರಶ್ನೆಯನ್ನು ಹುಟ್ಟು ಹಾಕುತ್ತದೆ. ತಮ್ಮ ನಿರಂತರ ಪ್ರಯತ್ನಕ್ಕೆ ಉತ್ತರವಾಗಿ ಸರಕಾರಿ ಕಾಲೇಜಿನ ಪ್ರಾಧ್ಯಾಪಕರಾದ ಖುಷಿಯ ಜೊತೆಗೆ "ನನ್ನ ಮಗನಿಗೆ ಏನಾಗಿದೆ ಎಂದು ಹೀಗೆ ಕೂತಿದ್ದೀರಾ? ಅವನಿಗೆ ಏನೂ ಆಗಲ್ಲ..!" ಎಂದು ದೃಷ್ಟಿ ಕಳೆದುಕೊಂಡಾಗಲೂ ಧೈರ್ಯದ ಮಾತುಗಳನ್ನಾಡಿದ ಲೇಖಕರ ತಾಯಿಯ ಅಗಲಿಕೆಯೊಂದಿಗೆ ಪುಸ್ತಕದ ಓದು ಓದುಗನ ಮನಸ್ಸನ್ನು ನಾಟುತ್ತದೆ.

-------------

ಸ್ಮರಣೀಯ ಕ್ಷಣಗಳು / ಪಾತ್ರಗಳು / ಕಲ್ಪನೆಗಳು:

ಒಂದೆರಡು ಕಡೆ ಇಷ್ಟವಾಯ್ತು ಎಂದು ಹೇಳಲು ಕಷ್ಟ. ಇಡೀ ಪುಸ್ತಕವೇ ಸ್ಫೂರ್ತಿದಾಯಕವಾಗಿದೆ. ಎಲ್ಲ ಕಷ್ಟ ಕೋಟಲೆಗಳನ್ನು ದಾಟಿ ಸರಕಾರಿ ಕಾಲೇಜಿನ ಪ್ರಾಧ್ಯಾಪಕರಾಗುವ ಲೇಖಕರ ಬಗ್ಗೆ ಓದಲು ಹೆಮ್ಮೆ ಎನಿಸುತ್ತದೆ.

-------------

ಯಾರಿಗಾಗಿ ಈ ಪುಸ್ತಕ ಸೂಕ್ತ?

ಎಲ್ಲಾ ವಯೋಮಾನದವರಿಗೂ ಈ ಪುಸ್ತಕ ಸೂಕ್ತವಾಗಿದೆ. ಅಂಧರಾದರೂ ಲೇಖಕರು ಬದುಕನ್ನು ಗೆದ್ದ ಬಗೆಯನ್ನು ತಿಳಿಯಲು ಈ ಪುಸ್ತಕವನ್ನು ಓದಲೇಬೇಕು.

-------------

ಸೂಚನೆ:

ನೀವು ಕೇವಲ ಒಂದು ಬಾರಿ ಮತ ಚಲಾಯಿಬಹುದು. ನೀವು ಈಗಾಗಲೇ ಮತ ನೀಡಿದ್ದರೆ, ಮತ್ತೊಮ್ಮೆ ಮತ ಹಾಕಲು ಸಾಧ್ಯವಿಲ್ಲ. ಮತದಾನ ಬಟನ್ ಸ್ವಯಂಚಾಲಿತವಾಗಿ ಚಲಾಯಿಸಲು ನಿಷ್ಕ್ರಿಯಗೊಳ್ಳಲಿದೆ. ನೀವು ಒಂದೇ Wi-Fi ನೆಟ್‌ವರ್ಕ್‍ಗೆ (ಮನೆ, ಆಫೀಸ್, ಕ್ಯಾಫೆ ಇತ್ಯಾದಿ) ಸಂಪರ್ಕಗೊಂಡಿದ್ದರೆ, ಎಲ್ಲರಿಗೂ ಒಂದೇ IP ವಿಳಾಸ ಇರುತ್ತದೆ. ಅದಕ್ಕಾಗಿ, ನೀವು ಮತ ಚಲಾಯಿಸಿರಲಿಲ್ಲವಾದರೂ, ಅದೇ ನೆಟ್‌ವರ್ಕ್‌ನಲ್ಲಿ ಮತ್ತೊಬ್ಬರು ಮತ ಚಲಾಯಿಸಿದ್ದರೆ, ನಿಮಗೂ Vote ಬಟನ್ ಕಾಣದೆ ಇರಬಹುದು. ಮತದಾನದಲ್ಲಿ ಯಾವುದೇ ತೊಂದರೆ ಆಗದಂತೆ, ಸಾಧ್ಯವಾದರೆ ವೈಯಕ್ತಿಕ ಇಂಟರ್ನೆಟ್ ಅಥವಾ ಮೊಬೈಲ್ ಡೇಟಾ ಬಳಸಿ.

4
Votes
82
Views
7 Months
Since posted

Voting Closed!

Scroll to Top